| ‘ನಯ’ವರ್ಣಗಳ ನಾರಾಯಣ್ ಕಲಾಕೃತಿಗಳು! |
• ಕ್ಯಾಲೆಂಡರ್ ಕಲೆಯ ಮುಂದುವರಿದ ಬೀಸುಗಳು • ಚಿತ್ರಕಲಾ ಪರಿಷತ್ ಗ್ಯಾಲರಿಯಲ್ಲಿ ಕಲಾಪ್ರದರ್ಶನ
Calendar art is less common these days, and in a few more years it may become obsolete. ಹೌದು ಈಗೀಗ ಕ್ಯಾಲೆಂಡರ್ ಕಲೆ ಅತಿ ವಿರಳ, ಕಲಾವಿದರೂ ವಿರಳ. ಕ್ಯಾಲೆಂಡರ್ ಸಂಸ್ಕೃತಿಯನ್ನೇ ಕಳೆದುಕೊಂಡಿರುವ ಈ ದಿನಗಳಲ್ಲಿ ಇನ್ನು ಅದಕ್ಕೆಲ್ಲಿ ಕಲಾಕೃತಿಯ ರಚನೆ ಎನ್ನುವ ಬದಲಾವಣೆ ಆಗಿದೆ. ಎಲ್ಲವೂ ಮೊಬೈಲ್ನಲ್ಲೇ ಸಿಗುವ ಈ ದಿನಗಳಲ್ಲಿ ಮನೆಯ ಗೋಡೆಗೇಕೆ ಕ್ಯಾಲೆಂಡರ್? ಅದರಲ್ಲೂ ಈಗಿನ ಮನೆಯ ಗೋಡೆಗಳಿಗೆ ಕ್ಯಾಲೆಂಡ್ ಇಳಿಬಿಡಲು ಅವಕಾಶವೇ ಇರುವುದಿಲ್ಲ. ಮನುಷ್ಯನ ಚಿಂತನಾ ಲಹರಿಯೇ ಬದಲಾಗಿದೆ. ಹೀಗಾಗಿ ಈ ಹಿಂದೆ ಇದ್ದ ಅದೆಷ್ಟೋ ಸಂಸ್ಕೃತಿಗಳು ಬದಲಾಗುತ್ತಿದೆ. ಹೊಸ ಹೊಸ ಆಲೋಚನೆಗಳು ಆವರಿಸಿಕೊಂಡಿದೆ, ಆವರಿಸಿಕೊಳ್ಳುತ್ತಿದೆ.
ಕ್ಯಾಲೆಂಡರ್ ಕಲಾಕೃತಿಗಳ ಕುರಿತಾಗಿ ಹೇಳುವ ಸಂದರ್ಭದಲ್ಲಿ ಕೇರಳದ ತಿರುವಾಂಕೂರು ರಾಜ ಮನೆತನದೊಂದಿಗಿನ ಸಂಪರ್ಕ, ಮೈಸೂರು ರಾಜಾಶ್ರಯ ಪಡೆದಿದ್ದ ಭಾರತದ ಶ್ರೇಷ್ಠ ಕಲಾವಿದ ರಾಜಾ ರವಿವರ್ಮ ಅವರನ್ನು ನೆನಪಿಸಿಕೊಳ್ಳಬೇಕು. ಭಾರತೀಯ ಕ್ಯಾಲೆಂಡರ್ ಆರ್ಟ್ ಸಂಸ್ಕೃತಿಯನ್ನು ಜನಪ್ರಿಯಗೊಳಿಸಿದ್ದರಲ್ಲಿ ರಾಜಾ ರವಿವರ್ಮ ಅವರ ಮೇಲ್ಪಂಕ್ತಿಯಲ್ಲಿ ನಿಲ್ಲುವ ಕಲಾವಿದರು. 1894ರಲ್ಲಿ ತಮ್ಮ ಕಲಾಕೃತಿಯನ್ನು ಮುದ್ರಿಸಲೆಂದು ಅಂದು ಮುಂಬೈನ ಘಾಟ್ಕೋಪರ್ನಲ್ಲಿ (Ghatkopar) ಮುದ್ರಣಾಲಯವನ್ನೇ ಸ್ಥಾಪಿಸಿದರು. ಈ ಮೂಲಕ ತಮ್ಮ ಉದ್ದೇಶ ಸಾಧಿಸಿ ಭಾರತದಾದ್ಯಂತ ಕ್ಯಾಲೆಂಡರ್ ಕಲಾ ಸಂಸ್ಕೃತಿಯನ್ನು ಬೆಳೆಸಿದರು. ಹೀಗಾಗಿ ರಾಜಾ ರವಿವರ್ಮ ಅವರ ಸ್ಮರಣೆ ಪ್ರಸ್ತುತವೆನಿಸಿತು.
ಅಷ್ಟಕ್ಕೂ ಇವನ್ನೆಲ್ಲ ನೆನಪಿಸಿಕೊಳ್ಳಲು ಕಾರಣ ಕರ್ನಾಟಕ ಚಿತ್ರಕಲಾ ಪರಿಷತ್ನಲ್ಲಿ ನಡೆಯುತ್ತಿರುವ ಟಿ.ನಾರಾಯಣ ಅವರ ‘ANCIENT KARNATAKA’ ಏಕವ್ಯಕ್ತಿ ಕಲಾಪ್ರದರ್ಶನ. ಸುಮಾರು 60ವರ್ಷಗಳ ಅನುಭವದ ಸಾಧನೆ ತೆರೆದಿಡುವ ಕಲಾಪ್ರದರ್ಶನ ಇದೆನ್ನಬಹುದು. ತಮ್ಮದೆನ್ನಿಸಿಕೊಳ್ಳಬೇಕೆನ್ನುವ ಕಾರಣಕ್ಕಾಗಿ ವಿಭಿನ್ನ ಶೈಲಿಯ ಮೊರೆ ಹೋಗಿರುವ ನಾರಾಯಣ್ ಅವರು ಸಾವಿರಾರು ಕಲಾಕೃತಿಗಳನ್ನು ರಚಿಸಿದ್ದಾರೆ. ಬೆಂಗಳೂರಿನ ಶತಮಾನ ಇತಿಹಾಸದ ಕಲಾಶಾಲೆ ಕಲಾಮಂದಿರದ ನಂಟು ಹೊಂದಿದ್ದ 80ರ ಹರೆಯದ ನಾರಾಯಣ್ ಅವರು ಇಂದಿಗೂ ಅಷ್ಟೇ ಶ್ರದ್ಧೆ ಯಿಂದ ಕಲಾಕೃತಿಗಳ ರಚನೆಯಲ್ಲಿ ತೊಡಗಿಕೊಳ್ಳುತ್ತಾರೆ.
ಪ್ರದರ್ಶಿತ ಕಲಾಕೃತಿಗಳಲ್ಲಿ ಆಯಾ ಕಾಲಘಟ್ಟದಲ್ಲಿ ವಿಧಾನ ಸೌಧ, ಮಹಾತ್ಮ ಗಾಂಧಿ ರಸ್ತೆ ( M. G. Road), ಮೇಯೊ ಹಾಲ್ (Mayo Hall), ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ (National Gallery of Modern Art) ಸೇರಿದಂತೆ ಕೆಲ ಸ್ಥಳಗಳು ಹೇಗಿದ್ದವು ಎನ್ನುವುದನ್ನು ನೋಡಬಹುದಾಗಿದೆ. ಈಗಿನ ನೋಟಕ್ಕೆ ಹೇಗೆ ಕಾಣಿಸುತ್ತಿದೆ ಎಂದು ಹೋಲಿಸಲೊಂದು ಒಳ್ಳೆಯ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ ನಾರಾಯಣ್ ಅವರು. ಜತೆ ಜೊತೆಗೆ ಈ ಹಿಂದೆ ಕಾಣಲು ಸಾಧ್ಯವಾಗುತ್ತಿದ್ದ ದೇವಾನು ದೇವತೆಗಳ ಚಿತ್ರಗಳೂ ಇತಿಹಾಸ ನೆನಪಿಸುತ್ತವೆ.
ಎಲ್ಲಾ ಕಲಾಕೃತಿಗಳು ತೈಲವರ್ಣದಿಂದ ರಚಿಸಲ್ಪಟ್ಟಿರುವವು. ನಾಲ್ಕಾರು ದಶಕಗಳ ಹಿಂದಿನ ಬ್ಯಾನರ್, ಕಟೌಟ್ ಸಂಸ್ಕೃತಿಯ ‘ಯುಗ’ದಲ್ಲಿ ಬೆಳೆದು ಬಂದಿರುವ ನಾರಾಯಣ್ ಅವರು ಅಂದಿನ ಮುಂಬೈ ಸೆರೆಹಿಡಿಯುವ ಪ್ರಯತ್ನ ಮಾಡಿದ್ದಾರೆ. ಈ ಸರಣಿ ಕಲಾಕೃತಿಗಳಲ್ಲಿ ತಾಜ್ ಹೋಟೆಲ್ ಕಾಣಿಸುವ ಕಲಾಕೃತಿಯೊಂದನ್ನು ಪ್ರದರ್ಶಿಸಿದ್ದಾರೆ. ಇನ್ನೊಂದು ವಿಶೇಷವಾದ ಕಲಾಕೃತಿ ಮೈಸೂರು ಅರಮನೆ ವೈಭವದ್ದು. ದಸರಾ ಮೆರವಣಿಗೆ ಸಂದರ್ಭದ ಕಲಾಕೃತಿಯಲ್ಲಿ ನಾಡಿನ ಬೇರೆ ಬೇರೆ ಭಾಗದ ಪ್ರವಾಸಿಗರ ಉಡುಪುಗಳ ಸಂಸ್ಕೃತಿ ಗುರುತಿಸಬಹುದು.
ಸ್ನೇಹಿತರೆ, ಈ ಕಾಲಘಟ್ಟದ ಚಿಂತನೆಗಿಂತಲೂ ಬಲು ದೂರ ನಿಲ್ಲುವ ಕಲಾಕೃತಿಗಳಾದರೂ, ಒಂದೊಳ್ಳೆಯ ಕಲಾಪ್ರದರ್ಶನ. ಕಲಿಕೆಯ ದೃಷ್ಟಿಯಿಂದ ಕಲಾ ವಿದ್ಯಾರ್ಥಿಗಳು ನೋಡಬೇಕಾದ ಕಲಾಕೃತಿಗಳು. ‘ANCIENT KARNATAKA’ ಕಲಾಪ್ರದರ್ಶನ ಜೂನ್ 29ರಂದು ಸಂಪನ್ನಗೊಳ್ಳಲಿದೆ. ಬಿಡುವು ಮಾಡಿಕೊಂಡು ಹೋಗಿ ಬನ್ನಿ.
Courtesy:
— Ganapathi Agnihothri
Web Link:
https://agniprapancha.com/t-narayan-ancient-karnataka…/
#karnatakachitrakalaparishath #artist #artkarnataka #karnatakaart #calanderart #indianartist #karnatakaartist #ಅಗ್ನಿಪ್ರಪಂಚ #agniprapancha #vidhanasowdha