Live Stream

[ytplayer id=’22727′]

| Latest Version 8.0.1 |

State News

ದಾವಣಗೆರೆಯ ದೃಶ್ಯ ಕಲಾ ಮಹಾವಿದ್ಯಾಲಯದ “ಚಿತ್ರೋತ್ಸವ 2025”

ದಾವಣಗೆರೆಯ ದೃಶ್ಯ ಕಲಾ ಮಹಾವಿದ್ಯಾಲಯದ “ಚಿತ್ರೋತ್ಸವ 2025”

ದಾವಣಗೆರೆಯ ದೃಶ್ಯ ಕಲಾ ಮಹಾವಿದ್ಯಾಲಯದ “ಚಿತ್ರೋತ್ಸವ 2025” ನಿಮಿತ್ತ ದಿ-24-6-2025 ರಂದು (ಚಿತ್ರೋತ್ಸವ 2025 ದಿ24,25,26-6-2025ರ ವರೆಗೆ ಆಯೋಜನೆಗೊಂಡಿದೆ) ಆ ಮಹಾವಿದ್ಯಾಲಯದ ಸಭಾಂಗಣದಲ್ಲಿ ‌ತುಮಕೂರಿನ ರವೀಂದ್ರ ಕಲಾ ನಿಕೇತನದ ನಿವೃತ್ತ ಪ್ರಾಚಾರ್ಯ ಶ್ರೀಯುತ ಕಿಶೋರ್ ಕುಮಾರ್ ರವರ ಪೇಂಟಿಂಗ್ ಪ್ರಾತ್ಯಕ್ಷಿಕೆ ಏರ್ಪಟ್ಟಿತ್ತು.
ಕಿಶೋರ್ ಕುಮಾರ್ ರವರು ಕರ್ನಾಟಕದ ದೃಶ್ಯ ಕಲಾ ವಲಯದಲ್ಲಿ ಈಗಾಗಲೇ ಗುರುತಿಸಿಕೊಂಡಂತಹ ಕಲಾವಿದರು. ಮೂಲತಃ ಕಲಬುರ್ಗಿಯ ಗೋಗಿ ಎಂಬ ಹಳ್ಳಿಯ ವರಾದ ಇವರ ಚಿತ್ರಕಲಾ ಡಿಪ್ಲೋಮಾ ವ್ಯಾಸಂಗ ನಡೆದಿದ್ದು ಕಲಬುರ್ಗಿ ಯ ಪ್ರೊ.ವಿ.ಜಿ.ಅಂದಾನಿಯವರ ದಿ ಐಡಿಯಲ್ ಫೈನ್ ಆರ್ಟ್ ಇನ್ಸ್ಟಿಟ್ಯೂಟ್ ನಲ್ಲಿ. ಬೆಂಗಳೂರು ವಿ ವಿ ಯಿಂದ ಗ್ರಾಫಿಕ್ಸ್ ದಿಲ್ಲಿ ಪದವಿಧರರೂ ಹೌದು.ಹಂಪಿಯ ಕನ್ನಡ ವಿ ವಿ ದಿಲ್ಲಿ ದೃಶ್ಯ ಕಲೆಯಲ್ಲಿ ಸ್ನಾತಕೋತ್ತರ ಅಧ್ಯಯನ ಕೂಡಾ ಮಾಡಿದವರು.


ದಾವಣಗೆರೆಯ ದೃಶ್ಯ ಕಲಾ ಮಹಾವಿದ್ಯಾಲಯದಲ್ಲಿ ಅಕ್ರಿಲಿಕ್ ಬಣ್ಣಗಳಿಂದ ಕ್ಯಾನ್ವಾಸಿನ ಮೇಲೆ ನವ್ಯ ಶೈಲಿಯ ವರ್ಣಚಿತ್ರ ರಚನಾ ಪ್ರಾತ್ಯಕ್ಷಿಕೆ ನೀಡಿದ ಕಿಶೋರ್ ಕುಮಾರ್ ರವರು ಮೊದಲು ಅಚ್ಚು ಹಳದಿ ಬಣ್ಣದ ಹಾಸು ಬೀಸುಗಳನ್ನು ರೋಲರ್ ಮೂಲಕ ಕ್ಯಾನ್ವಾಸಿನ ಮೇಲೆ ಸವಾರಿ,ನಂತರ ಉಳಿದ ತೆರಪಿನ ಜಾಗದಲ್ಲಿ ಕಂದು ಬಣ್ಣದ ಪುಟ್ಟ ಸ್ಟ್ರೋಕ್ ಗಳನ್ನು ರೋಲರ್ ಮೂಲಕ ಹಾಕಿ ,ನಂತರ ಮತ್ತೆ ಅಲ್ಲಲ್ಲಿ ಹಾಳತವಾಗಿ ಬಣ್ಣ ಸಮೀಕರಣ-ಸಮ್ಮಿಳನ ನಡೆಸಿ,ತದನಂತರ ನವ್ಯ ಶೈಲಿಯ ಒಂದು ಸ್ತ್ರೀ ಆಕೃತಿ, ಕುದುರೆ ಮುಖ ಎದುರು ಬದುರಾಗಿ ಇರುವಂದದಿ ಸ್ಕೆಚ್ ಹಾಕಿ ,ನಂತರ ಕಪ್ಪು,ಹಸಿರು, ಕೆಂಪು ಬಣ್ಣಗಳು ನೋಟಕ್ಕೆ ಧಡಕ್ಕನೆ ಬಡಿಯುವಂತೆ ಸರ ಸರನೆ ಆ ಆಕೃತಿಗಳಿಗೆ ಲೇಪಿಸುತ್ತಾ, ಮತ್ತೆ ಮತ್ತೆ ಆ ವರ್ಣ ಪದರುಗಳ ಮೇಲೆ ಸರಿಹೊಂದುವ ಪೂರಕ, ಸಮರ್ಥಕ ಬಣ್ಣಗಳನ್ನು ಸಾಂಗತ್ಯಗೊಳಿಸುತ್ತಾ, ಮಧ್ಯೆ ಮಧ್ಯೆ ಬಣ್ಣ ಒಂದಿಷ್ಟು ಒಣಗುವ ಸಮಯದಲ್ಲಿ ಎದುರು ಕುಳಿತ ಕಲಾ ವಿದ್ಯಾರ್ಥಿಗಳ ಜೊತೆಗೆ ಸಂವಾದ ನಡೆಸುತ್ತಾ, ತಮ್ಮ ಕಲಬುರ್ಗಿಯ ಜವಾರಿ ಶೈಲಿಯಲ್ಲಿ ಕಲಾ ಜ್ಞಾನ ಹಂಚಿಕೊಂಡ ಪರಿ ಅವರೊಬ್ಬ ಪ್ರಬುದ್ಧ ಕಲಾವಿದರಷ್ಟೇ ಅಲ್ಲ , ಒಳ್ಳೆಯ ಅನುಭವಿ ಕಲಾ ಶಿಕ್ಷಕರೂ ಆಗಿದ್ದರೆಂಬುದನ್ನು ಸಾಕ್ಷೀಕರಿಸುವಂತಿತ್ತು.
ಚಿತ್ರೋತ್ಸವ 2025 ರ ನೆಪದಲ್ಲಿ ಆಯೋಜಿಸಿದ್ದ ಈ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಒಟ್ಟಂದದಲ್ಲಿ ಬಹಳ ಉಪಯುಕ್ತ ಚಟುವಟಿಕೆ ಎನಿಸಿತು.ಆಯೋಜಿಸಿದ ದಾವಣಗೆರೆ ವಿ ವಿ-ದಾವಣಗೆರೆ ದೃಶ್ಯ ಕಲಾ ಮಹಾವಿದ್ಯಾಲಯ ಕ್ಕೆ ಅಭಿನಂದನೆ ಹೇಳಲೇಬೇಕು.
—ಬರಹ–ದತ್ತಾತ್ರೇಯ. ಎನ್.ಭಟ್ಟ,ಕಲಾ ವಿಮರ್ಶಕ.
ಚಿತ್ರ ಕೃಪೆ – ಡಿ.ಎನ್.ಬಿ ಮತ್ತು ರಾಹುಲ್ (ಎಂ.ವಿ.ಎ ಪೇಂಟಿಂಗ್ ವಿದ್ಯಾರ್ಥಿ ದೃ.ಕ.ಮ.ವಿ.ದಾವಣಗೆರೆ)


Vishwanath Guggari
";