ವಿಜಯಪುರದ ಪಿ.ಎಸ್.ಕಡೇಮನಿ, ಮೈಸೂರಿನ ಡಾ.ವಿಠ್ಠಲರಡ್ಡಿ ಚುಳಕಿ, ಹಾಸನದ ಬಿ ಎಸ್ ದೇಸಾಯಿ, ತುಮಕೂರಿನ ಕಿಶೋರ್ ಕುಮಾರ್ ಕಲಾಕೃತಿಗಳ ಸಮೂಹ ಚಿತ್ರಕಲಾ ಪ್ರದರ್ಶನ
ಮುಂಬಯಿ: ಮಹಾನಗರದ ಜಹಾಂಗೀರ್ ಆರ್ಟ್ ಗ್ಯಾಲರಿಯಲ್ಲಿ ಕರುನಾಡಿನ ಕಲಾವಿದರ ಸಮೂಹ ಚಿತ್ರಕಲಾ ಪ್ರದರ್ಶನ “ಮುಂಬೈನ ಜಹಾಂಗೀರ್ ಆರ್ಟ್ ಗ್ಯಾಲರಿಯಲ್ಲಿ, ಆರ್ಟ್ ಫಾರ್ ಇಂಟಿಗ್ರಿಟಿ” ಎಂಬ ಉದಾತ್ತ ಶಿರೋನಾಮೆಯ ಅಡಿಯಲ್ಲಿ ಕರುನಾಡಿನ ನಾಲ್ವರು ಹಿರಿಯ ಕಲಾವಿದರ ಸಮೂಹ ಚಿತ್ರಕಲಾ ಪ್ರದರ್ಶನವನ್ನು ಮುಂಬಯಿಯ ಖ್ಯಾತ ಕಲಾವಿದ ಮನೋಜ್ ಕುಮಾರ್ ಸಾಕಳೆ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಅವರು, ಕರುನಾಡಿನ ನಾಲ್ವರು ಹಿರಿಯ ಕಲಾವಿದರು ರಚಿಸಿದ ಕಲಾಕೃತಿಗಳ ಕುರಿತು ಸದಭಿಪ್ರಾಯ ವ್ಯಕ್ತಪಡಿಸಿದರು.
ಕರ್ನಾಟಕದ ಎಲ್ಲ ಹಿರಿಯ ಕಲಾವಿದರ ಕಲಾಕೃತಿಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ರಚನೆಯಾಗಿವೆ ಎಂದ ಅವರು ಕಲಾವಿದರಾದ ಮೈಸೂರಿನ ಡಾ. ವಿಠ್ಠಲರಡ್ಡಿ ಚುಳಕಿ, ಹಾಸನದ ಬಿ ಎಸ್ ದೇಸಾಯಿ, ವಿಜಯಪುರದ ಪಿ.ಎಸ್.ಕಡೇಮನಿ, ತುಮಕೂರಿನ ಕಿಶೋರ್ ಕುಮಾರ್ ಅವರ ಕೃತಿಗಳ ಕುರಿತು ಶ್ಲಾಘಿಸಿದರು.
ಮುಖ್ಯ ಅತಿಥಿಗಳಾಗಿ ಖ್ಯಾತ ಯುವಕಲಾವಿದ, ಕನ್ನಡಿಗರ ಹಾಗೂ ಮರಾಠಿಗರ ಹೃದಯ ಬೆಸೆದ , ಪ್ರಸ್ತುತ ಪುಣೆಯಲ್ಲಿ ನೆಲೆಸಿರುವ ಕೂಡಲ ಹಿರೇಮಠ ಮಾತನಾಡಿ, ಕನ್ನಡಿಗ ಕಲಾವಿದರ ಕೃತಿಗಳನ್ನು ಆಸ್ಪಾದಿಸಿ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಕಲಾ ಪ್ರದರ್ಶನಗಳು ಜರುಗಲಿ ಎಂದು ಹಾರೈಸಿದರು.
ಕರ್ನಾಟಕ ಲಿತಕಲಾ ಅಕಾಡೆಮಿಯ ಸದಸ್ಯರು ಮತ್ತು ಮೈಸೂರಿನ ಶ್ರೀ ಕಲಾನಿಕೇತನ ಕಲಾಶಾಲೆಯ ಪ್ರಾಚಾರ್ಯ ಕೆ.ಸಿ ಮಹಾದೇವ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ನಮ್ಮ ಗುರುಗಳ ಮತ್ತು ನಮ್ಮ ಸಹಪಾಠಿಯ ಕಲಾಕೃತಿಗಳನ್ನು ನೋಡುವುದು ಮತ್ತು ಅವರ ಕಲಾಪ್ರದರ್ಶನದ ಉದ್ಘಾಟನೆ ಮಾಡುವುದು ನನಗೆ ವಿಶೇಷ ಸಂದರ್ಭವಾಗಿದೆ ಎಂದರು.
ಸಮೂಹ ಕಲಾ ಪ್ರದರ್ಶನದ ಹಿರಿಯ ಕಲಾವಿದರಾದ ಪಿ.ಎಸ್. ಕಡೇಮನಿ ಅವರು ಕಲೆ, ಕಲಾಕೃತಿಯ ಬಗ್ಗೆ ಯುವ ಕಲಾವಿದರಿಗೆ ಕಿವಿಮಾತು ಹೇಳಿದರು .
ಈ ಪ್ರದರ್ಶನದಲ್ಲಿ ಮೈಸೂರಿನ ಕಲಾನಿಕೇತನ ಕಲಾಶಾಲೆಯ ಡಾ. ವಿಠ್ಠಲರಡ್ಡಿ ಯವರ ಶಿಷ್ಯರು, 50 ವಿದ್ಯಾರ್ಥಿ- ವಿದ್ಯಾರ್ಥಿನಿಯರು ಭಾಗವಹಿಸಿದ್ದು ವಿಶೇಷವಾಗಿತ್ತು. ಉಪನ್ಯಾಸಕ ಎ. ಎಸ್. ಪರಮೇಶ್ವರ, ಸಿ. ಚಿಕ್ಕಣ್ಣ, ಕಲಾವಿದರಾದ ಗಣೇಶ್ ದೊಡಮನಿ, ವಿ ಬಿ ಬಿರಾದಾರ, ವಿದ್ಯಾಧರ ಸಾಲಿ ಉಪಸ್ಥಿತರಿದ್ದರು. ಕಲಾವಿದ ಬಿ. ಎಸ್.ದೇಸಾಯಿ ವಂದಿಸಿದರು.
Courtesy: ಉದಯರಶ್ಮಿ ದಿನಪತ್ರಿಕೆ
–https://udayarashminews.com/?p=39874&fbclid=IwY2xjawJIdrFleHRuA2FlbQIxMQABHSPFaTYv7jKQZ3Bk2y08fDYSp-Odb2TN4kf7o_NcdU0o6h0ryOBwRjTNDA_aem_nxEXW_TX_ovYGd_UehHthg